ಸಂಪಾಜೆ ಯಕ್ಷೋತ್ಸವಕ್ಕೆ ರಜತ ಸಂಭ್ರಮ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 7 , 2015
|
ನವ೦ಬರ್ 3, 2015
|
ಸಂಪಾಜೆ ಯಕ್ಷೋತ್ಸವಕ್ಕೆ ರಜತ ಸಂಭ್ರಮ
ಸುಳ್ಯ :
ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ನ. 7ರಂದು 3 ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಶ್ರೀದೇವಿ ಮಹಾತ್ಮೆ ಸ್ಪರ್ಧೆಯ ಮೂರಾಟ ಪ್ರದರ್ಶನ ನಡೆಯಲಿದೆ. ಸಂಪಾಜೆಯ ಕಲ್ಲುಗುಂಡಿ ಶಾಲೆ ವಠಾರದಲ್ಲಿ ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ.
ಶಾಲೆಯ ಆಟದ ಮೈದಾನದ 2 ಎಕರೆ ಜಾಗವನ್ನು ಸಮತಟ್ಟು ಮಾಡಲಾಗಿದ್ದು, ವಿಶಾಲವಾದ ಚಪ್ಪರ ಹಾಕಲಾಗಿದೆ. ಮೂರು ರಂಗ ಸ್ಥಳ ನಿರ್ಮಿಸಲಾಗಿದೆ. ಇದೇ 7ರಂದು ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಪರಕ್ಕಜೆ ಗಣಪತಿ ಭಟ್ಟರ ಅಭಿನಂದನಾ ಗ್ರಂಥ, ಯಕ್ಷಗಾನದ ಸವ್ಯಸಾಚಿ ಕೆ. ಗೋವಿಂದ ಭಟ್ಟರ ಅಭಿನಂದನ ಗ್ರಂಥ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ ವಿರಚಿತ ಋಷಿ ಪರಂಪರೆ ಗ್ರಂಥವನ್ನು ಮತ್ತು ರವಿಶಂಕರ ವಳಕುಂಜ ವಿರಚಿತ ಯಕ್ಷಪಾತ್ರ ದೀಪಿಕಾ ಪುಸ್ತಕ ಬಿಡುಗಡೆಗೊಳಿಸಲಾಗುವುದು. ಬಳಿಕ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ 12 ಮಂದಿ ಭಾಗವತರು, 12 ಮದ್ದಳೆಗಾರರು, 12 ಮಂದಿ ಚೆಂಡೆವಾದಕರು, 9 ಮಂದಿ ಚಕ್ರ ತಾಳದಲ್ಲಿ ಸಹಕರಿಸಲಿದ್ದಾರೆ. ಮೂರು ತಂಡಗಳಲ್ಲಿ ಹಿರಿಯ, ಕಿರಿಯ ಕಲಾವಿದರು ಸೇರಿ ಒಟ್ಟು 100 ಮಂದಿ ಕಲಾವಿದರು ಶ್ರೀದೇವಿ ಮಹಾತ್ಮೆ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.
14ರಂದು ಸಂಪಾಜೆ ಯಕ್ಷೋತ್ಸವ: ಡಾ. ಕೀಲಾರು ಸಂಸ್ಮರಣೆ ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ನಡೆಯುವ ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರ ಸಂಸ್ಮರಣೆ ಮತ್ತು ಸಂಪಾಜೆ ಯಕ್ಷೋತ್ಸವ ನ. 14ರಂದು ಬೆಳಗ್ಗೆ 10ಕ್ಕೆ ಸಂಪಾಜೆ ಕಲ್ಲುಗುಂಡಿ ಶಾಲೆ ವಠಾರದಲ್ಲಿ ನಡೆಯಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದು, ಪೇಜಾವರ ಸ್ವಾಮೀಜಿ, ಎಡನೀರು ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರ ಸಂಸ್ಮರಣಾ ಗ್ರಂಥ ಸಮನ್ವಯ, ಯಕ್ಷೋತ್ಸವದ 25ರ ನೆನಪಿನ ಗ್ರಂಥ ರಜತ ಸಂಭ್ರಮ ಬಿಡುಗಡೆ ಹಾಗೂ ವಿಶಿಷ್ಟ ಸಾಧಕರಿಗೆ ರಜತ ಸಂಭ್ರಮ ಪ್ರಶಸ್ತಿ ಪ್ರದಾನ ಮತ್ತು 25 ವರ್ಷಗಳಲ್ಲೂ ಭಾಗವಹಿಸಿದ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಡಾ. ನರಸಿಂಹ ಅಡಿಗರಿಗೆ ಅಭಿನಂದನೆ, ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರಿಗೆ ಸನ್ಮಾನ, ಪ್ರಸಿದ್ಧ ಯಕ್ಷಗಾನ ಭಾಗವತ ಅಗರಿ ರಘುರಾಮ ಅವರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಖ್ಯಾತ ಅರ್ಥಧಾರಿಗಳಾದ ಡಾ. ಪ್ರಭಾಕರ ಜೋಶಿ ಸಂಸ್ಮರಣಾ ಭಾಷಣ ಮಾಡಲಿದ್ದು, ವಾಸುದೇವ ರಂಗಾಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಮಾರಂಭದ ಬಳಿಕ ಅಷ್ಟಾಕ್ಷರಿ ಮಹಿಮೆ, ರತ್ನಾವತಿ ಕಲ್ಯಾಣ, ಗಂಧರ್ವ ಕನ್ಯೆ, ಶ್ರೀದೇವಿ ಮೂಕಾಂಬಿಕೆ ಮತ್ತು ಮಾಯ ಮಾರುತೇ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಕೃಪೆ :
vijaykarnataka
|
|
|